Tuesday, October 16, 2012

ಶಿರಸ್ಸಿಗೆ ತಂಪು ಕೊಡುವ ಸಿರ್ಸಿ...ಒಂದು ಸುತ್ತು - ಭಾಗ ೨

ಕರುನಾಡ ತಾಯಿಗೆ ಸರಿಯಾದ ಬೈತಲೆ ಇಲ್ಲ.ತಲೆಯ ಮೇಲೆ ಬರಿ ಹಳ್ಳ ದಿಣ್ಣೆಗಳು ಅನ್ನುವ ಮಾತು ಕೇಳಿ ಕೇಳಿ ಸಾಕಾಗಿತ್ತು..

ಮೈಸೂರು ರಸ್ತೆಯಲ್ಲಿ ಸಂದೀಪ್ ಮತ್ತು ನಾನು ಗಾಡಿ ಹತ್ತಿ ಶುರುವಾದ ನಮ್ಮ ಪಯಣ, ಕೋರಮಂಗಲದ ಅಗರದಲ್ಲಿ ಪ್ರಶಾಂತ್, ಮಾರತ್ ಹಳ್ಳಿಯ ಬಳಿ ಲತೇಶ್ , ಹೆಬ್ಬಾಳದ ಮೇಲು ರಸ್ತೆಯ ಕೆಳಗೆ ರಘು ಹತ್ತಿದ ಮೇಲೆ ಭರದಿಂದ ತುಮಕೂರು  ರಸ್ತೆಯ ಗೊರಗುಂಟೆ  ಪಾಳ್ಯಕ್ಕೆ ಬರುವ ತನಕವೂ ಈ ಮೇಲಿನ ನುಡಿ ಸರಿ ಅನ್ನಿಸಿತು...!

ಹೌದು ಕರುನಾಡಿನ ತಾಯಿಗೆ ಸರಿಯಾದ ಬೈತಲೆ ಬೇಕು..!

ತುಮಕೂರು ರಸ್ತೆಯ ಮೇಲು ರಸ್ತೆ ಹತ್ತಿದೆವು...ಅಬ್ಬ..ನಮ್ಮ ಸಾರಥಿ "ಸುನೀಲ್" ಅವರ ನಾಗಾಲೋಟ ಶುರುವಾಯಿತು..ನೆಲಮಂಗಲ,  ತುಮಕೂರು, ಹಿರಿಯೂರು,   ಚಿತ್ರದುರ್ಗ, ದಾವಣಗೆರೆ, ರಾಣಿಬೆನ್ನೂರ್ ,  ಹಾವೇರಿ..ಆಹಾ ಎಂತಹ ರಸ್ತೆ...ಅಮೋಘವಾದ ರಸ್ತೆಯಲ್ಲಿನ ಪಯಣ..ಮೇಲಿನ ಮಾತನ್ನು ಸುಳ್ಳು ಮಾಡಿತು.

ಹಾನಗಲ್ ಮೂಲಕ ಸಿರ್ಸಿ  ಹೊರಟಿತ್ತು ನಮ್ಮ ಪಯಣ...ಅಚಾನಕ್ಕಾಗಿ

"ಪ್ರಶಾಂತ್..ಪ್ರಶಾಂತ್" ಅಂದೇ

"ಎಸ್ ಬಡ್ಡಿ...ವೀ ಕೆನ್ ಟೇಕ್ ಬಾತ್ ಹಿಯರ್ " ಅಂದ...
ಪ್ರಕೃತಿ ಮಾತೆ ಹಸಿರ ಸೀರೆಯುಟ್ಟು ಸ್ವಾಗತ ಕೋರಿದಳು

ಪಯಣಿಸಿ ದಣಿದ ಮೈ ಮನಕ್ಕೆ ಮುದ ನೀಡಲು ಸಿಕ್ಕ ನೀರು...
ಸೊಗಸಾದ ಸ್ನಾನವಾಯಿತು...ವಾಹನ ಸಿರ್ಸಿ ಊರಿನ ಸತ್ಕಾರ್ ಹೋಟೆಲ್ ಮುಂದೆ ನಿಂತಿತು.
ದಿಗ್ವಾಸ್ ಹೇಳಿದಂತೆ...ಮಸಾಲಾ ದೋಸೆಯನ್ನು ಹೊಟ್ಟೆಗೆ ಇಳಿಸಿ ಗ್ರಾಮ ದೇವತೆಯಂತೆ ನೆಲೆ ನಿಂತಿರುವ "ಮಾರಿಕಾಂಬ" ದೇವಸ್ಥಾನಕ್ಕೆ ಮನಸು ಮತ್ತು ದೇಹ ಎರಡು ಹೊಕ್ಕಿತು..(ಪ್ರಕಾಶಣ್ಣ, ಆಶಾ ಅತ್ತಿಗೆ ಬಾಲೂ  ಸರ್ ಈ ದೇವಸ್ಥಾನದ ಬಗ್ಗೆ ಹೇಳಿದ್ದರು)

ಹಲವಾರು ವರ್ಷಗಳ ಹಿಂದೆ ಮೊದಲ ಬಾರಿಗೆ ಮಾರಿಕಾಂಬ ದೇವಸ್ಥಾನದ ಚಿತ್ರ ನೋಡಿದಾಗ..ಜೈಪುರದ ಹವಾ ಮಹಲ್ ನೆನಪಿಗೆ ಬಂದಿತ್ತು ಮೊದಲ ಬಾರಿಗೆ ಕಣ್ಣಿಂದ ನೋಡಿ ದರ್ಶನ ಪಡೆಯುವ ಭಾಗ್ಯ.
ಮಾರಿಕಾಂಬ ದೇವಸ್ಥಾನ - ಜೈಪುರದ ಹವಾ ಮಹಲ್ !!!!
ದೇವಸ್ಥಾನ ಬಲು ಸೊಗಸಾಗಿದೆ..ಅಂಗಳದ ವಿನ್ಯಾಸ, ಒಳಗಿನ ಸಭಾ ಮಂಟಪ, ಅಲ್ಲಿ ದೇವಿಯ ವಿವಿಧ ಶಕ್ತಿಗಳ ಪ್ರತಿರೂಪದ ಚಿತ್ರ..ಆಹಾ ಸೊಗಸೇ ಸೊಗಸು...

ಮೆಲ್ಲನೆ ಸೌಂದರ್ಯ ಭಕ್ತಿ ಎರಡು ಮೇಳೈಸಿರುವ ದೇವಾಲಯವನ್ನು ನೋಡುತ್ತಾ ಒಳಗೆ ಹೋದಾಗ ಕಂಡಿದ್ದು ದೇವಿ                    ಶ್ರೀ ಮಾರಿಕಾಂಬೆ..

ಆಪ್ತಮಿತ್ರದಲ್ಲಿ ರಾಮಚಂದ್ರ ಆಚಾರ್ಯರು ನೆಲ ಮೆಟ್ಟಿ ದೊಡನೆ ಸಿಗುವ ಮಿಂಚಿನ ಸಂಚಾರ ನನ್ನ
ಮೈಯೊಳಗೂ ಸುಳಿದಾಡಿದ ಅನುಭವವಾಯಿತು.ಕೆಲ ನಿಮಿಷ ದೇವಿಯನ್ನು ಕಣ್ಣು ತುಂಬಾ ತುಂಬಿಕೊಂಡು ಕೆಲ ನಿಮಿಷಗಳು ಹಾಗೆ ಮೈ ಮರೆತು ಧ್ಯಾನ ಮಾಡಿದಾಗ, ಸುಮಾರು 450 ಕಿ.ಮಿ. ಪ್ರಯಾಣದ ಆಯಾಸ ಹಾಗೆಯೇ ಗಾಳಿಯಲ್ಲಿ ಲೀನವಾಯಿತು.

ಅಲ್ಲಿಯೇ ಇದ್ದ ದೇವಾಲಯದ ಸಿಬ್ಬಂಧಿಯನ್ನು ಚಿತ್ರ ತೆಗೆಯುವ ಬಗ್ಗೆ ಕೇಳಿ ಅಪ್ಪಣೆ ಪಡೆದು.ದೇವಾಲಯದ ಸುತ್ತ ತಿರುಗಾಡಿ ಮನಸಿಗೆ ಮತ್ತು ಕ್ಯಾಮೆರಾದ ಹೊಟ್ಟೆಗೆ ಹಿಡಿಸುವಷ್ಟು ಚಿತ್ರಗಳನ್ನು ತೆಗೆದುಕೊಂಡು ಇನ್ನೊಮೆ  ನನ್ನಾಕೆ ಮತ್ತು ನನ್ನ ಸ್ನೇಹಿತೆಯನ್ನು (ಮಗಳು) ಮಾರಿಕಾಂಬೆಯ ದರುಶನಕ್ಕೆ ಕರೆದುಕೊಂಡು ಬರುವ ನಿರ್ಧಾರವನ್ನು ತೆಗೆದುಕೊಂಡು ಹೊರಗೆ ಬಂದೆ ಅಥವಾ ಹೊರಗೆ ಕಾಲಿಟ್ಟೆ!!!

ಭಕ್ತಿ ಇತ್ತು, ಸೌಂದರ್ಯ ಇತ್ತು, ಕಲೆ ಇತ್ತು, ಬಲೆ ಇತ್ತು, ಶಕ್ತಿ ಇತ್ತು, ಲಾಲಿತ್ಯ ಇತ್ತು...ಆಹಾ ಮತ್ತೊಮ್ಮೆ ಭೇಟಿ ನೀಡುವ ಅವಕಾಶ ಶೀಘ್ರ ಬರಲಿ ಎಂದು ಪ್ರಾರ್ಥಿಸುತ್ತೇನೆ...

ಶ್ರೀ ಮಾರಿಕಾಂಬೆಯ ಇತಿಹಾಸ ದೇವಾಲಯದ ನಿರ್ಮಾಣ, ಪೂಜಾ ವಿಧಿ ವಿಧಾನ, ಎಲ್ಲವೂ "ಶಿರಸಿ ಸಿರಿದೇವಿ ಶ್ರೀ ಮಾರಿಕಾಂಬೆ" ಎನ್ನುವ ದೇವಾಲಯ ಹೊರತಂದಿರುವ ಕಿರು ಹೊತ್ತಿಗೆಯಲ್ಲಿ ಲಭ್ಯವಿದೆ..ಇದರ ಬೆಲೆ ಕೇವಲ ಹದಿನೈದು ರೂಪಾಯಿಗಳು ಆದರೆ ಕೊಡುವ ಮಾಹಿತಿ ಬೆಲೆ ಕಟ್ಟಲಾಗದ್ದು!

ದೇವಿಯಾ ವಿಗ್ರಹ ಅನುಪಮವಾಗಿದೆ...ಹೊತ್ತಿಗೆಯಲ್ಲಿ ಕೊಟ್ಟಿರುವ ಮಾಹಿತಿ ಪ್ರಕಾರ.ದೇವಿಯಾ ಮೂರ್ತಿ ಮರದಿಂದ ಕೂಡಿದ್ದು ಅದು ಬಿಡಿಯಾಗಿ ಒಂದು ಪೆಟ್ಟಿಗೆಯಲ್ಲಿ ಕೆರೆಯಲ್ಲಿ ಸಿಕ್ಕಿತು..ಅದರ ವಿವರ ಹೊತ್ತಿಗೆಯಲ್ಲಿ ತುಂಬಾ ರಮಣೀಯವಾಗಿ ವಿವರಿಸಿದ್ದಾರೆ.

ಅಲ್ಲಿನ ಚಿತ್ರಗಳು ನಿಮಗಾಗಿ..ನಿಮ್ಮೆಲ್ಲರಿಗಾಗಿ...



ಎಲ್ಲಿ ಮಾತೆಯೋ ಅಲ್ಲಿ ಪ್ರೀತಿ...ಅಪರೂಪದ ಯಜ್ಞ ಕುಂಡ 

ಗೋಡೆಯ ಮೇಲಿನ ಚಿತ್ರ...ಸೊಗಸು

ಬಲೆ..ಗೋಪುರದ ಕೆಳಗೆ ಬಲೆ..

ನರಸಿಂಹ-ಹಿರಣ್ಯಕಶಿಪು  ಕದನ ಮತ್ತು ಸಂಹಾರ



ಶಕ್ತಿ..!!!

ಸೌಂದರ್ಯ!!!

ಲಾಲಿತ್ಯ!!!


ಧ್ಯಾನ ಮಾಡುತಿದ್ದಾಗ ದೇವಿ ಮಾರಿಕಾಂಬೆ ಕಿವಿಯ ಬಳಿ  ಪಿಸುಗುಟ್ಟಿದ ಅನುಭವವಾಯಿತು.."ಮಗೂ ..ನನ್ನ ಮೂರ್ತಿಯ ಆಗಮನ ಈ ಊರಿಗೆ ಸುಮಾರು ನಾನೂರು ವರುಷಗಳ ಹಿಂದೆ ಆಯಿತು..ಶಕ್ತಿ ದೇವತೆಯಾಗಿ ಇಲ್ಲಿ ನೆಲೆಸಿದ್ದೇನೆ...ನಮ್ಮ ಕರುನಾಡಿನ ಮೊದಲ ರಾಜ "ಕದಂಬ" ಚಕ್ರವರ್ತಿ ಮಯೂರ ವರ್ಮನ ಬನವಾಸಿಯನ್ನು ನೋಡುವುದಿಲ್ಲವೇ...ಅಲ್ಲಿನ ಚರಿತ್ರೆ ನಿನಗೆ ಬೇಡವೇ...ಅಲ್ಲಿನ ಚಿತ್ರ ತೆಗೆಯುದಿಲ್ಲವೇ..ಆ ಸ್ಥಳ ಸುಮಾರು 1800 ವರ್ಷಗಳ ಹಿಂದಿನ ಇತಿಹಾಸ ಹೇಳುತ್ತೆ.ಹೊರಡು ಮಗು ಬನವಾಸಿಯ ಕಡೆಗೆ ನಿನ್ನ ಪಯಣ.ಶುರುವಾಗಲಿ"

ಅರೆ ಇದೇನು ಮಯೂರ ಚಿತ್ರದ ಸಂಭಾಷಣೆಯಂತೆ ಇದೆಯಲ್ಲ ಎಂದು ಕಣ್ಣು ತೆಗೆದು ನೋಡಿದೆ..ಕೆಳಗಿನ ದೃಶ್ಯ ಕಣ್ಣ ಮುಂದೆ ಹಾಗೆ ಬಂದು ಹೋಯಿತು..



ಮನಸ್ಸು ದೇಹ ಎರಡು ಬನವಾಸಿಯ ಇತಿಹಾಸ ಪ್ರಸಿದ್ಧ ಶ್ರೀ ಮಧುಕೇಶ್ವರನ ದೇವಸ್ಥಾನ ಮುಂದೆ ಮಂಡಿಯೂರಿ ನಿಂತಿತ್ತು..ಮೈ-ಮನ ಹಾಗೆ ಸಣ್ಣಗೆ ಕಂಪಿಸಿತು..ಎಂಥಹ ಭಾಗ್ಯ ನನ್ನದು ಕದಂಬ ಚಕ್ರವರ್ತಿ ನೆಡೆದಾಡಿದ್ದ ಭೂಮಿಯ ಸ್ಪರ್ಶ ನನಗೆ ಸಿಕ್ಕಿದ್ದು!!!

ದೇವಾಲಯದ ಶ್ರೀ ಮಧುಕೇಶ್ವರ ಜೇನು ತುಪ್ಪದ ಬಣ್ಣದ ಲಿಂಗ ರೂಪಿಯಾಗಿ ಮನಸೆಳೆಯುತ್ತಾನೆ..ದೇವಾಲಯದ ವಾಸ್ತು ಶಿಲ್ಪ ಕಣ್ಮನ ತುಂಬಿಸುತ್ತದೆ.ಇದನ್ನ ಪಟ್ಟಿ ಮಾಡುತ್ತಾ ಹೋದರೆ ಅದೇ ಒಂದು ಚರಿತ್ರೆಯಾಗುತ್ತದೆ.

ಸುಮಾರು ನಾಲ್ಕು ವಿವಿಧ ಹಂತಗಳಲ್ಲಿ ರಾಜಾರಾಳ್ವಿಕೆಯಲ್ಲಿ  ದೇವಸ್ಥಾನ ಅಭಿವೃದ್ಧಿ ಹೊಂದಿದೆ.
ಬನವಾಸಿ ದೇವಾಲಯ
ಮಧುಕೇಶ್ವರ ಲಿಂಗರೂಪ ಗಮನ ಸೆಳೆಯುತ್ತದೆ

ಈಶ್ವರನ ಎದುರು ಕಂಬಗಳ ಸಾಲಿನ ಮಧ್ಯೆ ಕುಳಿತಿರುವ ನಂದಿಯ ಮುಖ ಸ್ವಲ್ಪ ತಿರುಗಿರುವುದು ವಿಶೇಷ..
ಒಂದು ಕಣ್ಣಲ್ಲಿ ಈಶ್ವರನನ್ನು ಇನ್ನೊಂದು ಕಣ್ಣಲ್ಲಿ ಮಾತೆ ಪಾರ್ವತಿಯನ್ನು ನೋಡುತಿರುವಂತೆ ಭಾಸವಾಗುತ್ತದೆ
ಸುಂದರ ಕಲಾಕೃತಿ ಗರುಡ ಗಂಭ

ಶಿವ ಪಾರ್ವತಿಯನ್ನ ನೋಡುತ್ತಿರುವ ನಂದಿ

ಶಿವ ಪಾರ್ವತಿಯನ್ನ ನೋಡುತ್ತಿರುವ ನಂದಿ
ಕಲ್ಲು ಕಂಬಗಳ ಸಾಲು..ಮತ್ತು ಕಂಬಗಳಲ್ಲಿ ನಮ್ಮ ಬಿಂಬ ಎರಡು ಬಿಂಬಗಳು ಕಾಣುವುದು ವಿಶೇಷ.. ಕಂಬಗಳ ಕೆತ್ತನೆ ಉಬ್ಬುಕನ್ನಡಿ/ತಗ್ಗುಕನ್ನಡಿ ಮಾದರಿಯಲ್ಲಿ ಇರುವುದು ಇದಕ್ಕೆ ಕಾರಣ.

ಗರ್ಭ ಗೃಹದ ಹೊರಗೆ ಇರುವ ಕಲ್ಲು ಮಂಟಪ ಮನಸೆಳೆಯುತ್ತದೆ.ಮೂರು ಲೋಕಗಳನ್ನು ತೋರುವ (ಪಾತಾಳ, ಮಾನವಲೋಕ,  ದೇವಲೋಕ) ಕೆತ್ತನೆ ಸುಂದರವಾಗಿದೆ
ಸುಂದರ ಕಲ್ಲು ಮಂಟಪ..ಮೂರು ಲೋಕಗಳ ವೀಕ್ಷಣೆ..



ಅದರ ಪಕ್ಕದ ಗೋಡೆಯಲ್ಲಿ ಕೆತ್ತಿರುವ ಕಡಲೆ ಹನುಮ,  ಕಬ್ಬಿನ ಹನುಮ ಗಮನ ಸೆಳೆಯುತ್ತದೆ

ದೇವಾಲಯದಿಂದ ಹೊರಗೆ ಬಂದರೆ ಸುತ್ತಲು ಅಷ್ಟ ದಿಕ್ಪಾಲಕರು, ಶಿವ ಲಿಂಗದ ವಿವಿಧ ರೂಪಗಳು, ಚಿಂತಾಮಣಿ ಗಣಪ, ಡುಂಡಿರಾಜ ಗಣಪ ಗಮನ ಸೆಳೆಯುತ್ತವೆ


ಒಂದೇ ಶಿಲ್ಪದಲ್ಲಿ ಎರಡು ಮೂರು ಪ್ರಾಣಿಗಳ ಕೆತ್ತನೆ ಸುಂದರ...


ಶಿಲ್ಪಿಯ ಕೈಚಳಕ ..ಒಂದೇ ಮೂರ್ತಿಯಲ್ಲಿ ಎರಡು ಪ್ರಾಣಿಗಳು


ಅರ್ಧ ಗಣಪತಿ ವಿಶೇಷ ಇಲ್ಲಿ..ಉಳಿದರ್ದ ಕಾಶಿಯಲ್ಲಿದೆ ಎಂದು ಹೇಳುತ್ತಾರೆ



ಅರ್ಧ ಗಣಪತಿ

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  

ಒಂದೇ ಕಲ್ಲಿನಲ್ಲಿ ಕಡೆದ /ಕೆತ್ತಿದ  ಮಂಟಪ  
ಒಂದೇ ಕಲ್ಲಿನಲ್ಲಿ (ಬಂಡೆಯಲ್ಲಿ) ಕೆತ್ತಿದ ಕಲ್ಲಿನ ಮಂಟಪ ಸೊಗಸಾಗಿದೆ, ಕೆತ್ತನೆ, ಕುಸುರಿ ಕೆಲಸಗಳು ವಾಹ್  ಎನ್ನುವಂತೆ ಮಾಡುತ್ತದೆ. ಅಲಂಕರಿಸಲು ದೀಪಗಳನ್ನು ತೂಗು ಹಾಕಲು ವ್ಯವಸ್ಥೆ ಕೂಡ ಇದೆ.  ಶಿವರಾತ್ರಿಯಲ್ಲಿ ಇದರ ಅಲಂಕಾರ ಗಮನ ಸೆಳೆಯುತ್ತದೆ ಅಂದರು ಅಲ್ಲಿನ ಸ್ಥಳಿಯರು

ಮಾತಾ ಪಾರ್ವತಿಯ ದೇವಸ್ಥಾನ ಕೂಡ ಸೊಗಸಾಗಿದೆ..ಆ ದೇವಾಲಯದ ನಾಲ್ಕು ದಿಕ್ಕಿನಿಂದಲೂ ಹೊರಗೆ ಹೋಗಬಹುದು.  ಅದರ ಸುತ್ತಲು ಪ್ರತಿ ದಿಕ್ಕಿನ ಅಧಿಪಾಲಕರನ್ನು  ಚಿಕ್ಕ ಚಿಕ್ಕ ಗುಡಿಯಲ್ಲಿರುವುದು ಹಾಗು ಒಂದೇ ಸ್ಥಳದಲ್ಲಿ ಅಷ್ಟ ದಿಕ್ಪಾಲಕರು ಇರುವುದು ವಿಶೇಷ ಎಂದು ಹೇಳುತ್ತಾರೆ.

ಹೊರಗೆ ಎರಡು ರಥಗಳು ದೇವಸ್ಥಾನದ ರಾಜ ಬೀದಿಯನ್ನು  ನೋಡುತ್ತಾ ತನ್ನ ಅಲಂಕರಿಸಲು ಬರುವ ಘಳಿಗೆಗಳಿಗೆ ಕಾಯುತ್ತಿದೆ ಅನ್ನಿಸುತ್ತೆ...ಆ ರಥವನ್ನು ಅಲಂಕರಿಸುವ ವಿಧಾನ, ರಥವನ್ನು ಎಳೆಯಲು ಬಳಸುವ ಹಗ್ಗ ಎಲ್ಲವನ್ನು ತಿಳಿದಾಗ ರೋಮಾಂಚನದ ಅನುಭವ ನಮಗಾಯಿತು.






ಇನ್ನೇನು ಬನವಾಸಿಯಿಂದ ಹೊರಗೆ ಬರೋಣ ಅನ್ನುವಷ್ಟರಲ್ಲಿ ಅರ್ಚಕರು ಪ್ರಸಾದದ ವ್ಯವಸ್ಥೆ ಇದೆ ದಯವಿಟ್ಟು ಊಟ ಮಾಡಿಕೊಂಡು ಹೋಗಬೇಕು ಅಂದರು.. ಮೊದಲೇ ಹೊಟ್ಟೆ ಕಾದು  ಕಬ್ಬಿಣ ಆಗಿತ್ತು...ದಪ್ಪಕ್ಕಿ ಅನ್ನ , ತಿಳಿಯಾದ ತರಕಾರಿ ಭರಿತ ಸಾರು, ಉಪ್ಪಿನಕಾಯಿ, ಮಜ್ಜಿಗೆ ಎಲ್ಲವು ಆ ಬಿಸಿಲಿಗೆ ತಣ್ಣಗೆ ಹೊಟ್ಟೆಗೆ ಸೇರಿದವು..

ಬಿಸಿ ಬಿಸಿ ಊಟ ಮುಗಿಸಿ ವಾಹನದಲ್ಲಿ ಕೂತಾಗ ಹಾಗೆ ಕಣ್ಣ ಮುಂದೆ ಅಣ್ಣಾವ್ರ "ಮಯೂರ ಚಿತ್ರ, ಸಂಭಾಷಣೆ ಎಲ್ಲವು ಸುಳಿದಾಡುತಿದ್ದವು!!!

ಪಯಣಿಸಿದ ಮಾರ್ಗ..ಸಿರ್ಸಿ - ಮಾರಿಕಾಂಬ ದೇವಸ್ಥಾನ - ಬನವಾಸಿ
ಪಯಣಿಸಿದ ಮಾರ್ಗ

                                                                                                                                            (ಸಶೇಷ)

16 comments:

  1. ಎರಡನೇ ಭಾಗವು ಸಚಿತ್ರ ಪ್ರವಾಸ ಕಥನ.

    ನಿಜ ಹೇಳಬೇಕೆಂದರೆ ತಪ್ಪಿಸಿಕೊಂಡದ್ದಕ್ಕೆ, ಹೊಟ್ಟೆ ಉರಿಯಿತು.

    ಮುಂದುವರೆಯಲಿ....

    ReplyDelete
  2. ಹ ಹ ಹ...ಬದರಿ ಸರ್ ಏನು ವೇಚನೆ ಮಾಡಬೇಡಿ.ನಿಮ್ಮನ್ನ ಒಂದು ದಿನದ ಪ್ರವಾಸಕ್ಕೆ ಖಂಡಿತ ಕರೆದೊಯ್ಯುತ್ತೇನೆ ..ಧನ್ಯವಾದಗಳು ನಿಮಗೆ

    ReplyDelete
  3. ಚೆನ್ನಾಗಿ ಒಗ್ಗರಣೆ ಹಾಕಿ, ಮೆಣಸಿನಕಾಯಿ, ಕೊತ್ತಂಬರಿ, ಕರಿಬೇವು, ಈರುಳ್ಳಿ, ಅವರೇಕಾಳು, ನಿಂಬೆಹಣ್ಣು, ಕಡಲೆ ಬೀಜ ಇವೆಲ್ಲ ಹಾಕಿ ಮಾಡಿದ ಚಿತ್ರಾನ್ನ ಸೊಗಸು, ಸಿರ್ಸಿ ಪ್ರವಾಸ ಕೂಡ ಎಲ್ಲವನ್ನು ತುಂಬಿಕೊಂಡು ನಮಗೆ ಕಾದಿತ್ತು..ಧನ್ಯವಾದಗಳು ಎಸ್ . ಎಸ್

    ReplyDelete
  4. ಹಾ ಹಾ ..ಏನು ಸೊಗಸು.. ಎಂಥಾ ಚಿತ್ರಗಳು.. ಎಂಥ ಕೆತ್ತನೆ.. ವೈಭವಪೂರ್ಣವಾಗಿದೆ ಸಿರಸಿ ಮಾರಿಕಾಂಬೆಯ ದೇವಸ್ಥಾನ ಮತ್ತು ಬನವಾಸಿ ದೇವಸ್ಥಾನ... ಮುಂದುವರೆಯಲಿ ನಿಮ್ಮ ಪ್ರಯಾಣ ಕಥನ....

    ReplyDelete
  5. ತುಂಬಾ ಚೆನ್ನಾಗಿದೆ ಅಣ್ಣಯ್ಯ .. ಅಲ್ಲೇ ಹುಟ್ಟಿ ಬೆಳೆದರೂ.. ಅಲ್ಲಿನ ಬಗೆಗೆ ಗೊತ್ತಿದ್ದರೂ ಮತ್ತೆ ಮತ್ತೆ ಓದುವಾಗ ಇನ್ನೂ ಖುಷಿಯಾಗುತ್ತದೆ .. ಫೋಟೋಗಳು ಸೂಪರ್ ...

    ReplyDelete
  6. ಧನ್ಯವಾದಗಳು ಗಿರೀಶ್..ಸ್ಥಳಗಳು ಸೊಗಸಾಗಿವೆ..ಹಿಡಿದಷ್ಟು ಕಾಡುತ್ತವೆ..ಅಲ್ಲಿ ಸೆರೆ ಹಿಡಿದ ಚಿತ್ರಗಳನ್ನೆಲ್ಲ ನೋಡಿದ ಮೇಲೆ..ಅಯ್ಯೋ ಇನ್ನು ತೆಗಿಬೇಕಿತ್ತು ಅನ್ನಿಸುತ್ತದೆ...ಅಮೋಘ ಸ್ಥಳಗಳು..

    ReplyDelete
  7. ಧನ್ಯವಾದಗಳು ಎಸ್.ಪಿ. ಬಾಲ್ಯ ಕಳೆದ ಊರು, ಶಾಲೆ, ಮೊದಲ ಕೆಲಸ, ಮೊದಲ ಪ್ರವಾಸ ಇದರ ಬಗ್ಗೆ ಓದಿದಷ್ಟು ಮುಗಿಯದು..ಆಸಕ್ತಿ ತಣಿಯದು...

    ReplyDelete
  8. ಶ್ರೀಕಾಂತ್ ಸರ್ ನಿಮ್ಮ ಪ್ರವಾಸದ ಎರಡನೇ ಭಾಗ ತುಂಬಾ ಚೆನ್ನಾಗಿ ಮೂಡಿಬಂದಿದೆ. ಶಿರಸಿಯ ಸತ್ಕರ್ ಹೋಟೆಲ್ ಗರಿ ಗರಿ ಮಸಾಲೆ ದೋಸೆ ತಿಂದ ಹಾಗೆ ಇದೆ. ಅಪರೂಪದ ಚಿತ್ರಗಳೊಂದಿಗೆ ಸಿರ್ಸಿ ಮಾರಿಕಾಂಬೆ ದೇವಾಲಯ, ಬನವಾಸಿ ದೇವಾಲಯದ ದರ್ಶನ ಆಯಿತು. ಮತ್ತೊಮ್ಮೆ ಶಿರಸಿಯ ನೆನಪು ಮಾಡಿಕೊಟ್ಟದ್ದಕ್ಕೆ ನಿಮಗೆ ಧನ್ಯವಾದಗಳು. ಕಾಯುತ್ತಿದ್ದೇನೆ ,ನಿಮ್ಮ ಪ್ರವಾಸದ ಮುಂದಿನ ಕಂತುಗಳಿಗೆ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  9. ಆತ್ಮೀಯ ಶ್ರೀಕಾಂತ,
    ನಿನ್ನ ಪ್ರವಾಸ ಕಥನದ ಜೊತೆಗೆ ಚಿತ್ರಗಳು ಅತ್ಯುತ್ತಮವಾಗಿ ಹೊರಹೊಮ್ಮಿದೆ.

    ReplyDelete
  10. ಶ್ರೀಕಾಂತ್ ಸರ್,
    ನಾಲ್ಕು ವರ್ಷಗಳ ಹಿಂದೆ ಸಿರಸಿ ಸುತ್ತಾಡಿದ ನೆನಪು ಮರುಕಳಿಸಿದಂತಾಗಿತ್ತು ನಿಮ್ಮ ಚಿತ್ರ ಸಹಿತ ಲೇಖನವನ್ನು ಓದಿ. ಸಂಪೂರ್ಣ ವಿವರಣೆಯನ್ನೊಳಗೊಂಡ ಲೇಖನ...ಮುಂದುವರಿಸಿ..

    ReplyDelete
  11. ಬಾಲೂ ಸರ್ ಬನವಾಸಿ, ಮಾರಿಕಾಂಬೆಯ ಬ್ಲಾಗ್ ಬರೆಯುವಾಗ.ನಿಮ್ಮದೇ ನೆನಪು ಬರ್ತಾ ಇತ್ತು..ಧನ್ಯವಾದಗಳು ನಿಮ್ಮ ಅನಿಸಿಕೆಗೆ..ನಿಮ್ಮಿಂದ ಬರುವ ಪ್ರಶಂಸೆ ಸಾವಿರ ಚಪ್ಪಾಳೆಗಳಿಗೆ ಸಮ..ಧನ್ಯೋಸ್ಮಿ..

    ReplyDelete
  12. ಪ್ರಕಾಶ ಚಿಕ್ಕಪ್ಪ ಧನ್ಯವಾದಗಳು..ನಿಮ್ಮ ಪ್ರೋತ್ಸಾಹ ನೂರಾನೆ ಬಲ ಬರುತ್ತದೆ.

    ReplyDelete
  13. ಶಿವೂ ಸರ್. ಖುಷಿಯಾಗುತ್ತದೆ.ನಿಮ್ಮೆಲ್ಲರ ಪ್ರೋತ್ಸಾಹಕ್ಕೆ.ಲೇಖನ ಮುಂದುವರೆಯುತ್ತದೆ..ಧನ್ಯವಾದಗಳು

    ReplyDelete
  14. (ಕರುನಾಡ ತಾಯಿಗೆ ಸರಿಯಾದ ಬೈತಲೆ ಇಲ್ಲ.ತಲೆಯ ಮೇಲೆ ಬರಿ ಹಳ್ಳ ದಿಣ್ಣೆಗಳು ಅನ್ನುವ ಮಾತು ಕೇಳಿ ಕೇಳಿ ಸಾಕಾಗಿತ್ತು..)
    ಆದರೆ ನಾನು ಈ ಸಾಲುಗಳನ್ನು ಮೊದಲ ಬಾರಿ ಕೇಳುತಿದ್ದೇನೆ.... :))
    ದೇವಸ್ಥಾನದ ಸುಂದರ ಚಿತ್ರಗಳು ಮನಸೆಳೆಯಿತು .....

    ReplyDelete
  15. ಸುದೀಪ..ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು

    ReplyDelete